Skip to content
Home » ಕನ್ನಡ » ಪ್ರವಾಸ » ಗೊಮ್ಮಟನ ಕಂಡಿರಾ?

ಗೊಮ್ಮಟನ ಕಂಡಿರಾ?

    ಕರ್ನಾಟಕದಲ್ಲಿನ ಗೊಮ್ಮಟ ಪರಂಪರೆಯ ಹಿರಿಮೆ ವಿಶ್ವಪ್ರಸಿದ್ಧವಾದುದು. ಈ ಸಾಲಿಗೆ ಸಲ್ಲಬೇಕಾದ ಎಲ್ಲ ಹಿರಿಮೆ ಮಂಡ್ಯದ ಹೊಸಕೋಟೆಯ ಗೊಮ್ಮಟ ಮೂರ್ತಿಗಿದೆ.

    – ಲೇಖನ: ಕುಶಾಲ್ ವಿ.ಆರ್. (ಲೇಖನ ಹಾಗೂ ಚಿತ್ರ ಕೃಪೆ: ಪ್ರಜಾವಾಣಿ)

    ಶ್ರವಣಬೆಳಗೊಳದ ಗೊಮ್ಮಟೇಶ್ವರನ ಬೃಹತ್ ಮೂರ್ತಿಯದು ವಿಶ್ವಪ್ರಸಿದ್ಧಿ. ಕಾರ್ಕಳ, ವೇಣೂರು, ಧರ್ಮಸ್ಥಳದ ಗೊಮ್ಮಟ ಮೂರ್ತಿಗಳೂ ತಮ್ಮ ಗಾಂಭೀರ್ಯದಿಂದ, ಸ್ನಿಗ್ಧ ಸೌಂದರ್ಯದಿಂದ ಸಹೃದಯರ ಗಮನಸೆಳೆದಿವೆ. ಈ ಗೊಮ್ಮಟರ ಜನಪ್ರಿಯತೆಯ ಪ್ರಭಾವಳಿಯಲ್ಲಿ, ತೆರೆಮರೆಯಲ್ಲಿಯೇ ಉಳಿದಿರುವುದು ಮಂಡ್ಯದ ಪಾಂಡವಪುರಕ್ಕೆ ಸಮೀಪದ ಹೊಸಕೋಟೆಯ ಗೊಮ್ಮಟೇಶ್ವರ.
    ಕನ್ನಂಬಾಡಿಯ ಹಿನ್ನೀರಿಗೆ ಅಂಟಿಕೊಂಡಿರುವ ಸಣ್ಣ ಹಳ್ಳಿ ಹೊಸಕೋಟೆ. ಬಸದಿ ಹೊಸಕೋಟೆ ಎಂದೂ ಇದನ್ನು ಕರೆಯುವರು. ಶ್ರವಣಬೆಳಗೊಳದಷ್ಟೇ ಕಲಾತ್ಮಕವಾದ ಬಾಹುಬಲಿಯ ವಿಗ್ರಹ ಇಲ್ಲಿದೆ. ಸುಮಾರು 18 ಅಡಿ ಎತ್ತರವಿರುವ ಈ ವಿಗ್ರಹ ನೋಡಲು ನಯನ ಮನೋಹರ. ಇದರ ರಚನೆ 12ನೇ ಶತಮಾನದಲ್ಲಿ ಆಗಿರಬಹುದು ಎನ್ನುವುದಕ್ಕೆ ಪುರಾವೆಗಳು ದೊರಕಿದೆ.
    ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ಅರಸನಾದ ಬಿಟ್ಟಿದೇವನ (ವಿಷ್ಣುವರ್ಧನ) ಪ್ರಧಾನ ಮಂತ್ರಿಯಾದ ಪುಣಿಸಾಮಯ್ಯ ಈ ಸ್ಥಳದಲ್ಲಿ ಒಂದು ಜೈನಧರ್ಮ ಕ್ಷೇತ್ರವನ್ನು ಸ್ಥಾಪಿಸಿ, ಅದರ ದೈನಂದಿನ ನಿರ್ವಹಣೆಗಾಗಿ ಸುತ್ತಮುತ್ತಲಿನ ಹಳ್ಳಿಗಳನ್ನು ದೇಣಿಗೆಯಾಗಿ ನೀಡಿದ್ದರು ಎನ್ನುವ ವಿವರಗಳನ್ನುಳ್ಳ ಶಾಸನಗಳು ದೊರೆತಿವೆ. ಆದರೆ, ನಾಡಿನ ಮಹತ್ವದ ಜೈನ ಕ್ಷೇತ್ರಗಳಲ್ಲೊಂದಾಗಬೇಕಿದ್ದ ಹೊಸಕೋಟೆ ಕಾಲದ ಪ್ರವಾಹದಲ್ಲಿ ಮೂಲೆಗುಂಪಾಗಿಬಿಟ್ಟಿದೆ.
    ಕನ್ನಂಬಾಡಿಯ ಹಿನ್ನೀರಿನ ದಡದಲ್ಲಿ ಚಾಚಿರುವ ಸುಂದರವಾದ ಮರಗಳ ಕೆಳಗೆ ನೋಡಸಿಗುವ ಈ ಸ್ಥಳ ನಿಜವಾಗಿಯೂ ಮನಮೋಹಕ. ಇಲ್ಲಿನ ಬಾಹುಬಲಿಯ ವಿಗ್ರಹವನ್ನು ಹಸಿರು ಬಣ್ಣದ ಕಲ್ಲಿನಿಂದ ಕೆತ್ತಲಾಗಿದೆ. ನೋಡಲು ಇತರೆ ಗೊಮ್ಮಟೇಶ್ವರನ ಮೂರ್ತಿಗಳಂತೆ ಕಂಡುಬಂದರೂ ಇದರಲ್ಲಿ ಹಲವಾರು ವಿಶೇಷಗಳಿವೆ. ಬಾಹುಬಲಿಯ  ಕಾಲುಗಳನ್ನು ಬಳಸುವ ಬಳ್ಳಿಗಳೂ ಭಿನ್ನವಾಗಿವೆ. ವಿಗ್ರಹವು ಬಲಕ್ಕೆ ವಾಲಿಕೊಂಡಂತೆ ಭಾಸವಾಗುವುದು ಕೂಡ ವಿಶೇಷವೇ.
    ಗೊಮ್ಮಟೇಶ್ವರನ ಸಮೀಪದಲ್ಲಿ ಹಲವಾರು ಜೈನ ಬಸದಿಗಳ ಪಳೆಯುಳಿಕೆಗಳಿವೆ. ಸ್ಥಳಪುರಾಣದ ಪ್ರಕಾರ ಇಲ್ಲಿ ಹೊಯ್ಸಳರ ಕಾಲದ ಐದು ಮುಖ್ಯ ತೀರ್ಥಂಕರರ ಬಸದಿಗಳನ್ನು ನಿರ್ಮಿಸಲಾಗಿತ್ತು. ಅವುಗಳೆಲ್ಲ ಅವನತಿಯ ಅಂಚನ್ನು ತಲುಪಿವೆ. ಬಸದಿಯ ಬೃಹತ್ ಕಟ್ಟಡಗಳು ಕುಸಿದುಬಿದ್ದಿದ್ದು, ಕೆಲವು ಮಂಟಪಗಳು ಮಾತ್ರ ನೋಡಸಿಗುತ್ತವೆ. ತೀರ್ಥಂಕರರ ಮೂರ್ತಿಗಳು ಮತ್ತು ಇತರೆ ಶಿಲ್ಪಗಳು ಅನಾಥವಾಗಿ ಅಲ್ಲಿಲ್ಲಿ ಕಂಡುಬರುತ್ತವೆ.
    ಜೈನರ ಧಾರ್ಮಿಕ ಕ್ಷೇತ್ರಗಳಲ್ಲಿ ನಮಗೆ ಜೈನಧರ್ಮದ ಅನುಯಾಯಿಗಳು ಇರುವುದು ಸಾಮಾನ್ಯ. ಆದರೆ, ಬಸದಿ ಹೊಸಕೋಟೆಯಲ್ಲಿ ಒಂದೂ ಜೈನ ಮನೆತನ ವಾಸವಿಲ್ಲ.
    ಗೊಮ್ಮಟ ಮೂರ್ತಿಗಳ ಬಗ್ಗೆ ಆಸಕ್ತಿ ಇರುವವರು ನೋಡಲೇಬೇಕಾದ ಸ್ಥಳ ಹೊಸಕೋಟೆ. ಒಂದು ದಿನದ ಪ್ರವಾಸಕ್ಕೆ ಇದು ಪ್ರಶಸ್ತ ಸ್ಥಳವೂ ಹೌದು. ಪ್ರವಾಸಿಗರು ಊಟ–ತಿಂಡಿಯ ವ್ಯವಸ್ಥೆ ಮಾಡಿಕೊಂಡು ಹೋಗುವುದು ಅಗತ್ಯ.
    **
    ಗೊಮ್ಮಟನ ಸನ್ನಿಧಿಗೆ ದಾರಿ
    ಬಸದಿ ಹೊಸಕೋಟೆ ಬೆಂಗಳೂರಿನಿಂದ 150 ಕಿ.ಮೀ. ದೂರದಲ್ಲಿದೆ. ಪಾಂಡವಪುರ ರೈಲು ನಿಲ್ದಾಣದಿಂದ ಮಾಚುಗೋನಹಳ್ಳಿಗೆ ತೆರಳುವ ದಾರಿಯಲ್ಲಿ ಹೊಸಸಾಯಪ್ಪನಹಳ್ಳಿ (ಸಾಪ್ನಳ್ಳಿ) ಸಿಗುತ್ತದೆ. ಅಲ್ಲಿ ಎಡಕ್ಕೆ ತಿರುಗಿದರೆ ಸಿಗುವುದು ಬಸದಿಹಳ್ಳಿ. ಇಲ್ಲಿಂದ ಸುಮಾರು 2–3 ಕಿ.ಮೀ. ಕ್ರಮಿಸಿದರೆ ಬಸದಿ ಹೊಸಕೋಟೆ ಹಾಗೂ ಕನ್ನಂಬಾಡಿಯ ಹಿನ್ನೀರಿನ ರಮ್ಯ ಪರಿಸರ ಎಡತಾಕುತ್ತದೆ.
    error: Jain Heritage Centres - Celebrating Jain Heritage.....Globally!