Skip to content
Home » ಕನ್ನಡ » ಸುದ್ದಿ-ಸಮಾಚಾರ » ಮಸ್ತಕಾಭಿಷೇಕದ ಯಶಸ್ಸಿಗೆ ನೆರವು ಒದಗಿಸಲು ಸಿದ್ಧ: ಎ.ಮಂಜು

ಮಸ್ತಕಾಭಿಷೇಕದ ಯಶಸ್ಸಿಗೆ ನೆರವು ಒದಗಿಸಲು ಸಿದ್ಧ: ಎ.ಮಂಜು

    ಹಾಸನ, ಜನವರಿ ೨೭, ೨೦೧೭: ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕದ ಸಂಪೂರ್ಣ ಯಶಸ್ಸಿಗೆ ಸರಕಾರ ಮತ್ತು ಜಿಲ್ಲಾಡಳಿತ ಎಲ್ಲಾ ರೀತಿಯ ನೆರವನ್ನು ಒದಗಿಸಲು ಸಿದ್ಧ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯ ಮೊದಲನೆ ಮಹಡಿಯಲ್ಲಿ ಮಹಾಮಸ್ತಕಾಭಿಷೇಕದ ಪೂರ್ವ ತಯಾರಿ, ನಿರಂತರ ನಿಗಾವಹಿಸಲು ತೆರೆಯಲಾಗಿರುವ ಕಚೇರಿ ಉದ್ಘಾಟಿಸಿ ಮಾತನಾಡಿದರು.

    ಮಹಾಮಸ್ತಕಾಭಿಷೇಕ ದೇಶದಲ್ಲಿ ನಡೆಯುತ್ತಿರುವ ಅಪರೂಪದ ಘಟನೆ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೊಣೆಗಾರಿಕೆ ಸರಕಾರ, ಎಲ್ಲ ಜನ ಪ್ರತಿನಿಧಿಗಳು ಮತ್ತು ಎಲ್ಲಾ ಅಧಿಕಾರಿ ಸಿಬ್ಬಂದಿಯದ್ದಾಗಿದೆ. ಈಗಾಗಲೆ ಹೆಚ್ಚಿನ ಆರ್ಥಿಕ ನೆರವಿಗೆ ಕೇಂದ್ರಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರನ್ನೂ ಶೀಘ್ರದಲ್ಲೇ ಭೇಟಿ ಮಾಡಿ ಮನವಿ ಮಾಡಲಾಗುವುದು. ಇದೊಂದು ಉತ್ಸವ. ಇದಕ್ಕೆ ಕೇವಲ ಬಜೆಟ್‌ನಲ್ಲಿ ಘೋಷಿಸುವ ನೆರವನ್ನಷ್ಟೇ ನಿರೀಕ್ಷಿಸುವ ಅಗತ್ಯವಿಲ್ಲ. ಇತರ ಎಲ್ಲಾ ಸಂದರ್ಭಗಳಲ್ಲೂ ಅಗತ್ಯ ಪ್ರಮಾಣದ ಅನುದಾನ ತರಬಹುದಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ವಿ. ಚೈತ್ರಾ ಮಾತನಾಡಿ, ಮಹಾ ಮಸ್ತಕಾಭಿಷೇಕಕ್ಕೆ ಪೂರಕವಾಗಿ ಅಗತ್ಯವಿರುವ ಎಲ್ಲಾ ಯೋಜನೆಗಳು ಸಿದ್ಧವಾಗಿವೆ. ತಾತ್ಕಾಲಿಕ ಭೂ ಸ್ವಾಧೀನ ಪ್ರಕ್ರಿಯೆಗೆ ಸ್ಥಳಗಳನ್ನು ಗುರುತಿಸಿ ನಕ್ಷೆಯನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಸರಕಾರದಿಂದ ಈಗ 5 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಅದನು ವಿಭಾಗಿಸಿ ಅಟ್ಟಣಿಗೆಗಳ ನಿರ್ಮಾಣ ಸಿದ್ಧತೆಗೆ ಲೋಕೋಪಯೋಗಿ ಇಲಾಖೆ ಮತ್ತು ತಾತ್ಕಾಲಿಕ ಭೂ ಸ್ವಾಧೀನ ಪ್ರಕ್ರಿಯೆಗೆ ಕಂದಾಯ ಇಲಾಖೆಗೆ ಹಣ ಒದಗಿಸಲಾಗಿದ್ದು, ಉಳಿದ ಕಾಮಗಾರಿಗಳನ್ನು ಹಣ ಬಂದ ಕೂಡಲೆ ಪ್ರಾರಂಭಿಸಲಾಗುವುದು ಎಂದರು .

    ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕ ಮಹೋತ್ಸವದ ಕಾರ್ಯಾಧ್ಯಕ್ಷ ಜಿತೇಂದ್ರ ಕುಮಾರ್‌, ಶಾಸಕ ಸಿ.ಎನ್‌. ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯ ಗೋಪಾಲಸ್ವಾಮಿ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌, ಜಿಲ್ಲಾಧಿಕಾರಿ ವಿ. ಚೈತ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರ್‌ವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಉಪವಿಭಾಗಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌, ಮಠದ ಪ್ರತಿನಿಧಿ ಮದನಗೌಡ ಹಾಗೂ ಇತರರು ಹಾಜರಿದ್ದರು. – ಕೃಪೆ: ವಿಜಯವಾಣಿ, ಚಿತ್ರಗಳು: ಪ್ರಮೋದ್ ಜೈನ್, ಹಾಸನ

    error: Jain Heritage Centres - Celebrating Jain Heritage.....Globally!