ಮಂಗಳೂರು, ೩೦ ಅಕ್ಟೋಬರ್ ೨೦೨೨: ಭಾರತೀಯ ಅಂಚೆ ಇಲಾಖೆ ಮಂಗಳೂರು-ಪುತ್ತೂರು ಮತ್ತು ಶಿವಮೊಗ್ಗ ವಿಭಾಗಗಳಿಂದ ಶ್ರೀ ಹೊಂಬುಜ ಜೈನ ಮಠದ ಪ್ರಾಯೋಜಕತ್ವದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಐತಿಹಾಸಿಕ ಕ್ಷೇತ್ರಗಳ ಹಾಗೂ ಪುಣ್ಯ ವ್ಯಕ್ತಿಗಳನ್ನು ಒಳಗೊಂಡ ಅಂಚೆ ಕಾರ್ಡು ಗಳನ್ನು ಬಿಡುಗಡೆ ಮಾಡಲಾಯಿತು.
ಈ ಎಲ್ಲ ಅಂಚೆ ಕಾರ್ಡುಗಳನ್ನು ಹೊಂಬುಜ ಜೈನ ಮಠದ ಪ್ರಾಯೋಜಕತ್ವದಲ್ಲಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಶುಭಾಶೀರ್ವಾದದಿಂದ ಹೊರತರಲಾಗಿದೆ.
![ಜೈನ ಪುಣ್ಯಪುರುಷರ ಕುರಿತು ಅಂಚೆ ಕಾರ್ಡುಗಳ ಬಿಡುಗಡೆ](https://i0.wp.com/www.jainheritagecentres.com/wp-content/uploads/2022/11/Jain-Philately-Postal-Cards-Jina-Rathna-Bhushanaru-Release-Mangalore-Mangaluru.jpg?resize=1000%2C563)
ಕನ್ನಡ ನಾಡಿನ ಜಿನರತ್ನ ಭೂಷಣರು – ಕನ್ನಡ ನಾಡಿನ ಜಿನರತ್ನ ಭೂಷಣರು ಮಾಲಿಕೆಯಲ್ಲಿ ಕರ್ನಾಟಕದ ಹತ್ತು ಜೈನ ಪುಣ್ಯ ಪುರುಷರ ಪೋಸ್ಟ್ ಕಾರ್ಡುಗಳನ್ನು ಮಂಗಳೂರಿನಲ್ಲಿ ದಿನಾಂಕ ೩೦ ಅಕ್ಟೋಬರ್ ೨೦೨೨ರಂದು ಬಿಡುಗಡೆ ಮಾಡಲಾಯಿತು. ಇವುಗಳ ಹಿಂದೆ ಕ್ಯೂಆರ್ ಕೋಡ್ ಗಳನ್ನು ನೀಡಲಾಗಿದ್ದು, ಸ್ಕ್ಯಾನ್ ಮಾಡಿದಾಗ ನೇರವಾಗಿ ಅದು www.jainheritagecentres.com ಅಂತರ್ಜಾಲದ ಸಾಧಕರ ಜೀವನ ಚರಿತ್ರೆಯನ್ನು ಚಿತ್ರಿಸುವ ಪುಟಕ್ಕೆ ಕರೆದೊಯ್ಯುತ್ತದೆ. ಪ್ರತಿಯೊಬ್ಬ ಪುಣ್ಯಪುರುಷರ ಜೀವನ ಚರಿತ್ರೆಯನ್ನು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ನೀಡಲಾಗಿದೆ.
ಆದಿಕವಿ ಪಂಪ, ಪೊನ್ನ, ರನ್ನ, ಜನ್ನ, ಚಾವುಂಡರಾಯ, ರತ್ನಾಕರವರ್ಣಿ, ದಾನಚಿಂತಾಮಣಿ ಅತ್ತಿಮಬ್ಬೆ, ನಾಟ್ಯರಾಣಿ ಶಾಂತಲಾ, ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ, ಅಬ್ಬಕ್ಕ ರಾಣಿ ಚೌಟ ಇವರುಗಳ ಕುರಿತು ಪೋಸ್ಟ್ ಕಾರ್ಡುಗಳನ್ನು ಹೊರತರಲಾಗಿದೆ.
ತಂಡದ ಕಾರ್ಯ – ಈ ಕಾರ್ಯವು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದುದರ ಫಲ ಎಂದರೆ ಅತಿಶಯೋಕ್ತಿಯಾಗಲಾರದು. ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಈ ಕಾರ್ಯಕ್ಕೆ ಆಶೀರ್ವದಿಸಿ ಪ್ರಾಯೋಜಿಸಿದ್ದಾರೆ. ಇಡೀ ಕಾರ್ಯದ ಮುಂದಾಳತ್ವವನ್ನು ಶಿಕ್ಷಣತಜ್ಞ ಹುಬ್ಬಳ್ಳಿಯ ಮಹಾವೀರ್ ಕುಂದೂರ್ ವಹಿಸಿದ್ದರು. ಪುಣ್ಯಪುರುಷರ ಬಗ್ಗೆ ಕನ್ನಡದ ಲೇಖನಗಳನ್ನು ಮೂಡಬಿದ್ರೆಯ ಕಾಲೇಜನ ನಿವೃತ್ತ ಉಪ -ಪ್ರಾಂಶಪಾಲರಾದ ಪ್ರೊ. ಅಜಿತ್ ಪ್ರಸಾದ ರವರು; ಪುಣ್ಯಪುರುಷರ ಬಗ್ಗೆ ಇಂಗ್ಲಿಷ್ ಲೇಖನಗಳನ್ನು ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ನ ಶ್ರೀ ನಿತಿನ್ ಹೆಚ್.ಪಿ. ರವರು ಬರೆದು ಇಂಗ್ಲಿಷ್ ಹಾಗೂ ಕನ್ನಡದ ಲೇಖನಗಳನ್ನು WWW.JAINHERITAGECENTRES.COM ಅಂತರ್ಜಾಲ ತಾಣಕ್ಕೆ ಅಳವಡಿಸಿದ್ದಾರೆ. ಮಂಗಳೂರು ಡಿವಿಷನ್ನಿನ ಅಂಚೆ ವಿಭಾಗದ ಸಕಲ ಸಿಬ್ಬಂದಿಯ ಪರಿಶ್ರಮ ಈ ಸ್ಮರಣಿಯ ಕಾರ್ಯದಲ್ಲಿದೆ.
- ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ